Bengaluru: ಒಂದು ಮಹತ್ವದ ಬದಲಾವಣೆ; ಉಳಿಯಿತು ₹169 ಕೋಟಿ ಜೊತೆ 600ಕ್ಕೂ ಹೆಚ್ಚು ಜನರ ಮನೆಗಳು!
ಬೆಂಗಳೂರು ಎಂದಾಕ್ಷಣ ಹಲವರಿಗೆ ನೆನಪಿಗೆ ಬರುವುದು ಇಲ್ಲಿನ ಟ್ರಾಫಿಕ್ ಸಮಸ್ಯೆ (Bengaluru Traffic). ಇಂದಿಗೂ ಪ್ರತಿದಿನ ಸಾಮಾಜಿಕ ಜಾಲತಾಣ ತೆರೆದರೆ ಸಾಕು ಬೆಂಗಳೂರು ಟ್ರಾಫಿಕ್ ಬಗ್ಗೆ ಗೇಲಿ ಮಾಡುವಂತಹ ಒಂದು ಪೋಸ್ಟ್ ನಮಗೆ ಕಾಣುತ್ತದೆ. ಇಂತಹ ಕುಖ್ಯಾತಿಯನ್ನು ತಪ್ಪಿಸಲು ಸರ್ಕಾರಗಳು ನಿರಂತರವಾಗಿ ಪ್ರಯತ್ನ ಮಾಡುತ್ತಿವೆ. ಇದರ ಭಾಗವಾಗಿಯೇ ಮೆಟ್ರೋ ನಿರ್ಮಾಣವನ್ನು (Namma Metro) ವೇಗಗೊಳಿಸಲು ಹಾಗೂ ಸಬ್ ಅರ್ಬನ್ ರೈಲು ಯೋಜನೆಯನ್ನು (Bengaluru Suburban Railway Project) ವೇಗವಾಗಿ ಮುಕ್ತಾಯ ಮಾಡಲು ಶ್ರಮ ವಹಿಸಲಾಗುತ್ತಿದೆ. ಆದರೆ ಭೂ ಶೇಖರಣೆ ಸೇರಿದಂತೆ ಹಣಕಾಸಿನ ತೊಂದರೆಯಿಂದ ಈ ಎರಡು ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಇದರ ನಡುವೆಯೇ ಭೂಮಿ ಕೊರತೆಯ (Land) ಸಮಸ್ಯೆಗೆ ಚೆಕ್ ಇಡುವಂತೆ ಬೆಂಗಳೂರು ಉಪನಗರ ರೈಲು (ಕೆ-ರೈಡ್) ಮತ್ತು ನಮ್ಮ ಮೆಟ್ರೋ ಸಂಸ್ಥೆಗಳ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದು 160 ಕೋಟಿ ರೂಪಾಯಿ ಸೇವ್ ಮಾಡುವುದು ಮಾತ್ರವಲ್ಲದೆ ಸುಮಾರು 600ಕ್ಕೂ ಹೆಚ್ಚು ಜನರಿಗೆ ಬಿಗ್ ರಿಲೀಫ್ ನೀಡಿದೆ.
ನಗರದ ಬೆನ್ನಿಗಾನಹಳ್ಳಿ ಬಳಿ ಬೆಂಗಳೂರು ಉಪನಗರ ರೈಲು ಯೋಜನೆಯ ಮಾರ್ಗ ಹಾಗೂ ನಮ್ಮ ಮೆಟ್ರೋದ ಮಾರ್ಗವೂ ಸುಮಾರು 500 ಮೀಟರ್ ದೂರ ಸಾಗಲಿದೆ. ಸಬ್ ಅರ್ಬನ್ ರೈಲು ಯೋಜನೆಯ ‘ಕನಕ ಲೈನ್’ ಮೇಲ್ಸೇತುವೆ, ನಮ್ಮ ಮೆಟ್ರೋದ ‘ನೀಲಿ ಮಾರ್ಗ’ ಮೇಲ್ಸೇತುವೆಯ ಕೆಳಭಾಗದಲ್ಲಿ ಹಾದು ಹೋಗಲಿದೆ. ಇದು ನೇರವಾಗಿದ್ದು, ಯಾವುದೇ ತಿರುವು ಇರೋದಿಲ್ಲ. ಆದ್ದರಿಂದ ಈ 500 ಮೀಟರ್ ಭಾಗದಲ್ಲಿ ಒಂದೇ ಪಿಲ್ಲರ್ ಬೇಸ್ನ ಮೇಲ್ಭಾಗದಲ್ಲಿ ಮೆಟ್ರೋ ಹಾಗೂ ಕೆಳಭಾಗದಲ್ಲಿ ರೈಲು ಸಾಗುವಂತೆ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.